ಶ್ರೀ ಗೋಸಲ ಚನ್ನಬಸವೇಶ್ವರರು ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಬಳಿಯ ವಾಣಿಜ್ಯಪುರಿ ಗೋಸಲಪೀಠದ ಅಧಿಪತಿಗಳಾಗಿದ್ದರು. ಜ್ಞಾನಪ್ರಸಾರದ ಮೂಲಕ ಲೋಕಕಲ್ಯಾಣಕ್ಕೆಂದು ಹೊರಟ ಶ್ರೀಗಳಿಗೆ ನಿಂದೆಯ ಮಾತುಗಳು ಎದುರಾದವು. ಇದರಿಂದ ಬೇಸರಗೊಂಡು ಸಾಧನೆಗೆ ತಕ್ಕ ಸ್ಥಳವನ್ನು ಹುಡುಕಿಹೊರಟರು. ಎಡೆಯೂರು ಸಿದ್ಧಲಿಂಗ ಶಿವಯೋಗಿಗಳು ಗೋಸಲ ಚನ್ನಬಸವೇಶ್ವರರನ್ನು ಗುರುವಾಗಿ ಸ್ವೀಕರಿಸಿದರು. ಗುಬ್ಬಿ ಪರಿಸರಕ್ಕೆ ಶಿಷ್ಯರೊಂದಿಗೆ ಆಗಮಿಸಿದ ಅವರು ಆದರ್ಶ ಶಿಷ್ಯ ಸಿದ್ಧಲಿಂಗೇಶ್ವರರನ್ನು ರೂಪಿಸಿ, ಧರ್ಮಜಾಗೃತಿಗಾಗಿ ಲೋಕಸಂಚಾರಕ್ಕೆ ಹೊರಡಲು ಸೂಚಿಸಿದರು. ಇಂದಿಗೂ ಗುಬ್ಬಿ ಹೊಸಹಳ್ಳಿ ಮಹಾನಾಡಪ್ರಭುಗಳ ಮನೆಯಲ್ಲಿ ಶ್ರೀಗಳ ಪೂಜಾ ಪರಿಕರ ಹಾಗೂ ಅಪೂರ್ವ ಪಾದುಕೆಗಳು ಪೂಜಿಸಲ್ಪಡುತ್ತಿವೆ.

ಗೋಸಲ ಸಿದ್ದೇಶ್ವರರಿಂದ ಸಿದ್ದಗಂಗಾ ಕ್ಷೇತ್ರ ಬೆಳಕಿಗೆ ಬಂತು.

ಕಲ್ಯಾಣದ ಕ್ರಾಂತಿಯ ನಂತರ ನಾನಾ ಕಡೆಗೆ ಚೆದುರಿದ ಶರಣರ ಒಂದು ಗುಂಪು ಶಿವಗಂಗೆ, ಸಿದ್ದಗಂಗೆ,ಗೂಳೂರು, ಗುಬ್ಬಿ ಬೇರೆ ಬೇರೆ ಕಡೆ ಸಂಚರಿಸಿ ತಮ್ಮ ಶರಣ ಧರ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದವು. ಇದರಲ್ಲಿ ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸಿದವರೇ ಗೋಸಲ ಸಿದ್ದೇಶ್ವರರು.

ಚಾಮರಾಜನಗರ ಜಿಲ್ಲೆ ಹರದನಹಳ್ಳಿಯ ಶೂನ್ಯ ಪೀಠ ಪರಂಪರೆಯ ಗೋಸಲ ಸಿದ್ದೇಶ್ವರರು ಧರ್ಮ ಪ್ರಚಾರಾರ್ಥ ವಿರಕ್ತಗಣಗಳೊಡನೆ ದೇಶಾಟನೆ ಹೊರಟು ಸಿದ್ದಗಂಗೆ ಬೆಟ್ಟದ ತಪ್ಪಲಿಗೆ ಬಂದು ತಪೋನುಷ್ಠಾನ ಮಾಡಿದರು. ಒಮ್ಮೆ ಒಬ್ಬ ವಿರಕ್ತರಿಗೆ ಬಾಯಾರಿಕೆಯಾಗಿ ಕತ್ತಲಲ್ಲಿ ನೀರಿಗಾಗಿ ಪರದಾಡಿದರು.

ವೃದ್ಧ ಯೋಗಿಗಳು ಶಕ್ತಿ ಹೀನರಾಗಿ ಗೋಸಲ ಸಿದ್ದೇಶ್ವರರನ್ನು ಪ್ರಾರ್ಥಿಸಿದರು. ಆಗ ಸಿದ್ದೇಶ್ವರರು ಪ್ರತ್ಯಕ್ಷರಾಗಿ ತಮ್ಮ ಮೊಣಕಾಲಿನಿಂದ ಬಂಡೆಗೆ ಗುದ್ದಿದ್ದಾಗ ಬಂಡೆ ಸೀಳಿಕೊಂಡು ಜಲ ಒಸರಿಸಿತು. ಈ ಸಿದ್ದರ ಪಾದ ಸ್ಪರ್ಶದಿಂದ ಉದ್ಭವವಾದ ಗಂಗೆಯೇ ಸಿದ್ದಗಂಗೆ. ಅಂದಿನಿಂದ ಈ ಕ್ಷೇತ್ರಕ್ಕೆ ಸಿದ್ದಗಂಗೆ ಎಂಬ ಹೆಸರು ಬಂತು. ಇಂದಿಗೂ ಭಕ್ತರು ತಮ್ಮ ಸಂತಾನ ಪ್ರಾಪ್ತಿ, ಇಷ್ಟ ಸಿದ್ದಿಗೆ, ಗಂಗಾ ಪೂಜೆ ಮಾಡಿ ತಮ್ಮ ಮನದ ಮಲಿನತೆಯನ್ನು ಕಳೆದುಕೊಳ್ಳುತ್ತಾರೆ.

ಗೋಸಲ ಸಿದ್ದೇಶ್ವರರಿಂದ ಬೆಳಕಿಗೆ ಬಂದ ಸಿದ್ದಗಂಗೆ ನಂತರ ಮಠವಾಗಿ ಪರಿವರ್ತನೆಯಾಯಿತು. ಗೋಸಲ ಸಿದ್ದೇಶ್ವರರು ಅಲ್ಲಿನ ಭಕ್ತರ ಸಹಾಯದಿಂದ ಬೆಟ್ಟದ ತಪ್ಪಲಿನಲ್ಲಿ ಒಂದು ಮಠ ಕಟ್ಟಿದರು.ಅದೇ ಈಗ ಪ್ರಸ್ತುತ ಇರುವ ಸಿದ್ದಗಂಗಾ ಮಠ. ಈ ಮಠದ ಚರಿತ್ರೆ ಗಮನಿಸಿದಾಗ 1350ರಲ್ಲಿ ನಿರ್ಮಾಣವಾಗಿರಬಹುದು ಎನ್ನಲಾಗುತ್ತದೆ..ನಂತರ ಸಿದ್ದೇಶ್ವರರು ಬಹುಕಾಲ ಇದೇ ಮಠದಲ್ಲಿ ಅನುಷ್ಠಾನಗೊಂಡಿದ್ದರು..

ನಂತರ ಗುಬ್ಬಿಯ ಗೋಸಲ ಚೆನ್ನಬಸವರಾಜೇಂದ್ರರಿಗೆ ಅನುಗ್ರಹ ಮಾಡಿದರು. ಗೋಸಲ ಚೆನ್ನ ಬಸವೇಶ್ವರರಿಂದ ಶ್ರೀ ಸಿದ್ದಲಿಂಗೇಶ್ವರರು ಷಟ್ಸ್ಥಲ ಜ್ಞಾನೋಪದೇಶ ಪಡೆದು ವಚನ ಸಾಹಿತ್ಯ ಪುನರುಜ್ಜೀವನ ಗೊಳಿಸಿದ ಮಹಾಯೋಗಿಗಳಾದರು. ಇವರು ಬೋಳ ಬಸವೇಶ್ವರರಿಗೆ ಅಧಿಕಾರ ವಹಿಸಿಕೊಟ್ಟು 700 ವಿರಕ್ತರು, 3000 ಚರಮೂರ್ತಿಗಳೊಡನೆ ಸಮಸ್ತ ಭಾರತವನ್ನು ಸುತ್ತಿ ಮಠಗಳನ್ನು ಸ್ಥಾಪಿಸಿ ಸಮರ್ಥ ಶಿಷ್ಯರನ್ನು ಅಲ್ಲಿಯೆ ನೆಲೆಗೊಳಿಸಿದ್ದರು.

1470 ರಲ್ಲಿ ಮತ್ತೆ ಸಿದ್ದಗಂಗೆಗೆ ಬಂದು ಅನೇಕ ಪವಾಡಗಳನ್ನು ಮಾಡ ತೊಡಗಿದರು. ನಂತರ ಕುಣಿಗಲïನ ಕಗ್ಗೆರೆಯಲ್ಲಿ ತಪೋನಿಷ್ಠೆ ಕೈಗೊಂಡರು. ನಂತರ ಎಡೆಯೂರಿನಲ್ಲಿ ಶಿವಯೋಗ ಸಮಾಧಿ ಹೊಂದಿದರು. 1470ರ ನಂತರ ಕೆಲವಾರು ವರ್ಷಗಳು ಸಿದ್ದಗಂಗೆಯ ಇತಿಹಾಸದ ದಾಖಲೆಗಳು ಲಭ್ಯವಾಗಿಲ್ಲ. 1850 ರಿಂದ ಮತ್ತೆ ಸಿದ್ದಗಂಗಾ ಮಠದ ಚರಿತ್ರೆ ಶುರುವಾಗುತ್ತದೆ.. ಉತ್ತರ ಕರ್ನಾಟಕದಿಂದ ಗುಬ್ಬಿಗೆ ಬಂದ ಅಟವಿಸ್ವಾಮಿಗಳು ಗೋಸಲ ಚನ್ನಬಸವೇಶ್ವರ ಸಮಾಧಿಯ ಸೇವೆ ಮಾಡಿದರು.

ಅಲ್ಲಿಯೇ ಒಂದು ತೊರೆಯ ಪಕ್ಕದಲ್ಲಿ ಮಠವನ್ನು ಕಟ್ಟಿದ್ದರು. ಅದೇ ಈಗಿನ ತೊರೆ ಮಠ. ಒಮ್ಮೆ ಸಿದ್ದಗಂಗಾ ಕ್ಷೇತ್ರದ ಮಹಿಮೆ ಕೇಳಿ ಅಲ್ಲಿಗೆ ಬಂದು ಗಂಗಾ ಪೂಜೆ ಕೈಗೊಂಡರು. ಸಿದ್ದಲಿಂಗೇಶ್ವರರ ಬಳಿಕ ಅಭಿವೃದ್ದಿ ಕಾಣದ ಸಿದ್ದಗಂಗಾ ಕ್ಷೇತ್ರ ಮತ್ತೆ ಪಾವನ ವಾಯಿತು. ಅಟವಿಸ್ವಾಮಿಗಳು ಅಲ್ಲಿಗೆ ಬರುವ ಭಕ್ತರಿಗೆ ಅನ್ನ, ವಸತಿ ನೀಡಲು ಅನ್ನಸಂತರ್ಪಣೆ ಕಾರ್ಯ ಪ್ರಾರಂಭಿಸಿದ್ದರು.

ಅಂದು ಅವರ ಅಮೃತ ಹಸ್ತದಿಂದ ಹಚ್ಚಿದ ಅಡುಗೆ ಒಲೆ ಇಂದಿಗೂ ನಂದದೆ ಮಠಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಸಿವು ನೀಗಿಸುತ್ತಿದೆ. ಇಲ್ಲಿಂದ ಶುರುವಾಯಿತು ಸಿದ್ದಗಂಗೆಯ ದಾಸೋಹ ವೈಭವ. ಅನ್ನದಾಸೋಹದ ಜೊತೆಗೆ ಅಕ್ಷರ ಸೇರಿ ಜ್ಞಾನ ದಾಸೋಹವೂ ಶುರುವಾಯಿತು. ಸಂಸ್ಕøತ ಅಭ್ಯಾಸ ಮತ್ತು ಪ್ರಾಥಮಿಕ ಹಂತದ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿ ನಿಲಯಗಳು ಪ್ರಾರಂಭಿಸಿದರು. ಅಂದು ಪ್ರಾರಂಭಿಸಿದ ಅನ್ನ, ವಿದ್ಯೆ ವಸತಿ, ಭಕ್ತಿಯ ಜ್ಞಾನ ದಾಸೋಹಗಳು ಇಂದಿಗೂ ಮುಂದುರಿಯುತ್ತಾ ಸಾಗಿದೆ.

#ಗೋಸಲ

#gosala

#gosalasrichannabasaveshwara